ತ್ರಿಪುರ ಸಾವಿರ ಶ್ರೀ ಬಾಸಮ್ಮನವರ ಹಬ್ಬದ ಕೊನೆಯ ಭಾಗವೆ ಬನಸುಗ್ಗಿ. ಹಿಂದಿನ ದಿನ ಗುರುವಾರ ಹಗಲುಸುಗ್ಗಿ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಹಗಲೆಲ್ಲಾ ಭಕ್ತರಿಗೆ ದರ್ಶನ ಕೊಟ್ಟು, ಏಳೂರು ಮೆಟ್ಟಿದ ಬಾಸಮ್ಮನವರು ರಾತ್ರಿ ಬನಕಾಡಿನ ತನ್ನ ಗುಡಿಯಲ್ಲಿ ನಿಶ್ಶಬ್ದವಾಗಿ ರಾತ್ರಿ ಕಳೆದರು. ಕಾಡು ದೇವಿಗೆ ಕಾಡೆ ಅಲ್ಲವೆ ಪ್ರಿಯ!!.
ಈ ದಿನ ಅಂದರೆ ಶುಕ್ರವಾರ 24 - ಎಪ್ರಿಲ್ - 2026ರ ರಾತ್ರಿ ಅಮ್ಮನವರ ನಿವಾಸ ಗುತ್ತಿಯ ಬನಕಾಡಿನಲ್ಲಿ ಬನಸುಗ್ಗಿ ನಡೆಯಿತು. ಹೆಸಗೂಡಿನ ನೆರಿಗಾಡಿನಲ್ಲಿ ತಂಗಿ ಸಬ್ಲಮ್ಮನವರ ಗುಡಿ ಇದ್ದು. ಅಲ್ಲಿ ಮೊನ್ನೆ ಇರುಳು ಸುಗ್ಗಿ ಮುಗಿಸಿ ತಂಗಿದ್ದ ತಂಗಿ ಸಬ್ಲಮ್ಮ , ಇಂದು ಬನಕಾಡಿನ ಅಕ್ಕನಲ್ಲಿಗೆ ಬಂದರು.
ಗುಡುಗು ಮಿಂಚು ಜಿಟಿ-ಜಿಟಿ ಮಳೆ ಬಂದು ಹೋಗಿ, ಪ್ರಕೃತಿಯಲ್ಲಿ ಉಲ್ಲಾಸ ತುಂಬಿತು. ಬನಕಾಡಿನ ತಂಪಾದ ಕಾನನದಲ್ಲಿ ಅಮ್ಮಂದಿರು ಇಬ್ಬರು ಅಲಂಕಾರದಲ್ಲಿ ಕುಳಿತರು. ಹಬ್ಬ ಸೇವೆ, ಹಣ್ಣು ಕಾಯಿ ಮಗ ಕೊಮಾರರಿಗೆ ಸಮೇತ ನಡೆಯಿತು. ಅಮ್ಮನವರ ಸುತ್ತಲ ಭೂತ ಗಣಗಳು ಆವೇಶ ಎಲ್ಲವೂ ಭಕ್ತಿಯಲ್ಲಿ ತುಂಬಿತ್ತು.
ಕೊನೆಗೂ ಹಬ್ಬದ ಮುಕ್ತಾಯ ಹತ್ತಿರ ಬಂದೇ ಬಿಟ್ಟಿತು. ಅರ್ಚಕರ ಗದ್ಗದಿತ ಧ್ವನಿಯನಲ್ಲಿ "ಹೊನ್ನಾರದಿಂದ ಬನಸುಗ್ಗಿ ವರೆಗೆ.. ಯಾವುದೇ ಅಡಚಣೆಗಳಿಲ್ಲದೆ ಸಾಗಿದ ಹಬ್ಬದ ಕೃತಜ್ಞತೆ.. ಇನ್ನು ಮುಂದೆಯೂ ಸರ್ವರಿಗೂ ಬರಬೇಕೆಂದ ಶ್ರೇಯಸ್ಸು, ಪ್ರೇಯಸ್ಸು.. " ಹೀಗೆ ಎಲ್ಲಾ ಬಿನ್ನಹ ಗಳೊಂದಿಗೆ 2026ರ ಈ ವರ್ಷದ ತ್ರಿಪುರ ಸಾವಿರ ಸುಗ್ಗಿಯ ತೆರೆ ಬಿದ್ದಿತು. ದೀಪದ ಬೆಳಕಿನಲ್ಲಿ ಹೊಳೆಯುತಿದ್ದ ದೊಡ್ಡಮ್ಮ, ಸಣ್ಣಮ್ಮನವರ ಸ್ವರ್ಣ, ರಜತ ಮುಖಗಳು; ಕಾನನದ ಕಗ್ಗತ್ತಲೆಯನ್ನು ಛೇದಿಸುತಿದ್ದ ಪರಿ ವರ್ಣನಾತೀತ. ಸ್ಮೃತಿ ಪಟಲದಲ್ಲಿ ಈ ನೆನಪುಗಳನ್ನು ಅಚ್ಚೊತ್ತಿ 2027ರ ಹಬ್ಬಕ್ಕೆ ಸಿಗುವ ಶುಭವಾಗಲಿ 🙏🙏🙏🥰🥰