Apr 12, 2014

ನಿದ್ದೆಯೊಳಗಣ ನಿದ್ದೆ

ಗಾಡ ನಿದ್ದೆಯಿಂದೆದ್ದೆ
ಎದ್ದವನೆ ಯೋಚಿಸಿದೆ
ನಿದ್ರೆಯಲ್ಲೂ ಯೋಚಿಸುತಿದ್ದೆ!
ಇದ್ದಿರ ಬಹುದೆ ಎಚ್ಚರವೂ ಒಂದು ನಿದ್ದೆ?


ದೂರದೂರಗಳ ಕಡೆಗೆ
ಹಗಲು ರಾತ್ರಿಗಳು ನಡೆದೆ
ಎದ್ದಾಗ ಇದ್ದಲ್ಲೇ ಇದ್ದೆ!
ಎದ್ದೆನೋ ಕನಸಲ್ಲೇ ಇದ್ದೆನೊ
ತಿಳಿಯದೊಂದೀ ನಿದ್ದೆ!
ನಿದ್ದೆಯೊಳಗಣ ನಿದ್ದೆ
ಎಚ್ಚರವೂ ನಿದ್ದೆ!
ನಿದ್ದೆ ಎದ್ದೆ, ಎದ್ದೆ ನಿದ್ದೆ
ಜೀವನವೇ ಸವೆಸಿದ್ದೆ
ಎದ್ದೆನೆಂದೀ ನಿದ್ದೆ
ಕೊನೆಗೂ ನಿದ್ದೆಯಲ್ಲೇ ಇದ್ದೆ!

ಮಾಂಡುಕ್ಯ ಹೇಳಿತ್ತು ಮೂರವಸ್ಥೆ
ಮುಂದಿಡುತ ನಾಲ್ಕನೆ ಅವಸ್ಥೆ
ಆದರೂ ನಿದ್ದೆಬಿಟ್ಟೇಳದೇ ಇದ್ದೆ
ಕನಸಿನಲ್ಲಿ ಕೇಳಿಸಿತ್ತು ಓಂಕಾರ
ಅಕಾರದಲ್ಲಿ ಎದ್ದೆನೆಂದಿದ್ದೆ
ಉಕಾರದಲ್ಲಿ ನಿದ್ದೆಯಲ್ಲಿದ್ದೆ
ಮಕಾರದಲ್ಲಿ ಸುಮ್ಮನಿದ್ದೆ
ಕೊನೆಗೂ ಓಂಕಾರವನರಿಯದೆ
ಮಲಗೇ ಇದ್ದೆ
ತುರಿಯವನರಿಯದೆ ಇದ್ದೆ
ಎದ್ದೆ ನಿದ್ದೆ, ನಿದ್ದೆ ಎದ್ದೆ
ಕನಸಿನಲ್ಲೇ ಕಳೆದಿದ್ದೆ ಎದ್ದೆನೆಂಬೀ ನಿದ್ದೆ
ನಿದ್ದೆಯೊಳಗಣ ನಿದ್ದೆ.

ಈ ಮೇಲಿನ ಕವನ ಈ ಕೆಳಗೆ ಹೇಳಿರುವ ಉಪನಿಷತ್ತಿನ ತುಣುಕಷ್ಟೆ!
ಯೋಗಿಯ ಮುಕ್ತಿಗೊಂದೇ ಸಾಕು ಮಾಂಡುಕ್ಯೋಪನಿಷತ್ ಎಂದಿರುವುದು ಇದರ ಹಿರಿಮೆಗೊಂದು ಗರಿ. ಆಧಿ ಶಂಕರರ ಗುರುಗಳಾದ ಗೌಡಪಾದರು ಇದಕ್ಕೆ ಕಾರಿಕೆಗಳ ರಚಿಸಿದ್ದಾರೆ ಎಂದಮೇಲೆ ಈ ಉಪನಿಷತ್ತಿನ ಮಹತ್ವ ಎಷ್ಟಿರಬೇಕು ಗಮನಿಸಿ. ಸರಳವಾಗಿ ಅವಸ್ಥಾತ್ರಯಗಳಾದ ಎಚ್ಚರ, ನಿದ್ರೆ, ಸುಷುಪ್ತಿಗಳ ಮೂಲಕ ಅರಿವಿಗೆ ನಿಲುಕದ ತುರಿಯವನ್ನು ಓಂಕಾರದೊಂದಿಗೆ ಹೋಲಿಸಿ ಸೃಷ್ಟಿಯನ್ನೇ ವಿಶ್ಲೇಷಿಸಿ  ಅಲ್ಲಗಳೆಯುವ ಅತ್ಯಮೂಲ್ಯವಾದ ಈ ವೇದಾಂತವನ್ನ ಜೀವನದಲ್ಲೊಮ್ಮೆ ಆದರೂ ಓದಲೇ ಬೇಕು. ದೇವರೆಂಬುವವನ ಹೆಸರನ್ನೇ ತರದೆ ದೈವಿಕತೆಗೆ ದೂಡುವ  ಪರಿಯೆ ಈ ಮಾಂಡುಕ್ಯದ ಮಹತ್ವ.

Life is but a dream within a dream. A dream of Vishnu sleeping deep in the infinite pealing ocean, says the scriptures. God may not be the dreams of men but men may be the dreams of God. It is the one you call it God, soul or consciousness or anything that is which dreams and whole universe appears to be manifested!

No comments:

Post a Comment